ಅರಳು ಹುರಿದಂತೆ ಮಾತನಾಡುವ, ವೃತ್ತಿಯಲ್ಲಿ ಬಹುಬೇಗ ನಿರ್ದೇಶಕರಾಗುತ್ತಿರುವ ನಟ ರವಿತೇಜ ಮುಂದಿನ ತಿಂಗಳು ‘ಬಿಸ್ಕೆಟ್’ ಚಿತ್ರವನ್ನೂ ಕೈಗೆತ್ತಿಕೊಳ್ಳಲಿದ್ದಾರೆ. ಯಾರು, ಯಾರಿಗೆ, ಯಾತಕ್ಕೆ ‘ಬಿಸ್ಕೆಟ್’ ಹಾಕುತ್ತಾರೆ ಎಂಬುದೇ ಕುತೂಹಲದ ವಿಚಾರ.
ಸಮಾಜದಲ್ಲಿ ಜರುಗುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ರವಿತೇಜ ಕಥೆ, ಚಿತ್ರಕಥೆ ಸಿದ್ದಪಡಿಸಿ ನಿರ್ದೇಶನ ಪಟ್ಟ ಸಹ ಏರಲಿದ್ದಾರೆ. ‘ಬಿಸ್ಕೆಟ್’…. ಹುಡ್ಗಿ ಸ್ವೀಟ್....ಹುಡ್ಗನ ಕಣ್ಣಲ್ಲಿ ಸಾಲ್ಟ್...ಎಂಬ ಬರಹದ ಅಡಿಯಲ್ಲಿ ಸೆಟ್ಟೇರುತ್ತಿರುವ ಈ ಚಿತ್ರದ ನಿರ್ಮಾಪಕರು ಕೆ. ರಾಮಸ್ವಾಮಿ. ನಿನದೇ ನೆನಪು, ನಂ ಏರಿಯಾದಲ್ ಒಂದಿನ... ಚಿತ್ರಗಳನ್ನು ನಿರ್ಮಿಸಿ ಈಗ ಮೂರನೇ ಚಿತ್ರ ‘ಬಿಸ್ಕೆಟ್’ ತಯಾರಿಸಲು ಆಣಿ ಆಗುತ್ತಿದ್ದಾರೆ.
ರವಿ ತೇಜ ‘ಬಿಸ್ಕೆಟ್’ ಚಿತ್ರದ ಫೋಟೋ ಷೂಟ್ ಅನ್ನು ಭುವನ್ ಎನ್ನುವ ಸ್ಟಿಲ್ ಫೊಟೋಗ್ರಾಫರ್ ಸಹಾಯದಿಂದ ಬೆಂಗಳೂರು ಅರ್ಧ ಭಾಗವನ್ನು ಉಪಯೋಗಿಸಿಕೊಂಡು ಚಿತ್ರಕ್ಕೊಂದು ಮೂಡ್ ಸಹ ಜೋಪಾನವಾಗಿ ಮಾಡಿಕೊಳ್ಳುತ್ತಿದ್ದಾರೆ.
ಚೇತನ್ ಚಂದ್ರ ಹಾಗೂ ಐಶ್ವರ್ಯ ನಾಗ್ ಅಭಿನಯದ ಈ ಚಿತ್ರಕ್ಕೆ ಏಳೆಂಟು ಕಲರ್ಫುಲ್ ಉಡುಗೆಗೊಳೊಂದಿಗೆ ಅನೇಕ ಸ್ಥಳಗಳಲ್ಲಿ ಸೋಮವಾರ ಫೋಟೋ ಷೂಟ್ ಮಾಡಲಾಗಿದೆ.
ಬೆಂಗಳೂರಿನ ಎಂ ಜಿ ರಸ್ತೆ, ಯು. ಬಿ ಟವರ್, ಬ್ರಿಗೇಡ್ ರಸ್ತೆ, ಸಿಟೀ ಮಾರ್ಕೆಟ್, ಮಜೆಸ್ಟಿಕ್, ರೇಸ್ ಕೋರ್ಸ್, ಅಲ್ಸೂರ್ ಹಾಗೂ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಶ್ರೀಮಂತಿಕೆಯಿಂದ ಸ್ಥಿರ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.
ಕಳೆದ 12 ವರ್ಷಗಳಲ್ಲಿ 25 ಸಿನೆಮಾಗಳಲ್ಲಿ, 12 ಟಿವಿ ಸೇರಿಯಲ್ಗಳಲ್ಲಿ, ಕೆಲವು ಜಾಹೀರಾತುಗಳಿಗೆ ಕೆಲಸ ಮಾಡಿರುವ ರವಿ ತೇಜ ಹತ್ತು ಹಲವು ಆಸೆಗಳನ್ನು ಪರಿಶ್ರಮದ ಜೊತೆಗೆ ಪೇರಿಸಿ ಪ್ರೇಕ್ಷಕನಿಗೆ ಮನೋರಂಜನೆ ಜೊತೆ ಮನೋವಿಕಾಸ ಸಹ ನೀಡಲಾಗುವುದು ಎಂದು ರವಿ ತೇಜ ತಿಳಿಸಿದ್ದಾರೆ. ಸ್ವತಂತ್ರ ನಿರ್ದೇಶಕರಗುತ್ತಿರುವ ಈ ಘಳಿಗೆಯಲ್ಲಿ ರವಿ ತೇಜ ಅವರು ಉಷ ಭಂಡಾರಿ, ಅರವಿಂದ್ ಕೌಶಿಕ್, ಸಿಹಿಕಹಿ ಗೀತಾ ಹಾಗೂ ಸಿಹಿಕಹಿ ಚಂದ್ರು ಅವರು ಪ್ರೋತ್ಸಾಹವನ್ನು ಮರೆಯುವುದುಂಟೇ ಎನ್ನುತ್ತಾರೆ. ಅಂದಹಾಗೆ ಈ ಚಿತ್ರದಲ್ಲಿ ರವಿ ತೇಜ ಕೇವಲ ನಿರ್ದೇಶನ. ಅವರು ತೆರೆಯಮೇಲೆ ಕಾಣಿಸಿಕೊಳ್ಳುವುದಿಲ್ಲ. ಜವಾಬ್ದಾರಿ ಹೆಚ್ಚಾಗಿದೆ ಅಂತಾರೆ. ಬಿಸ್ಕೆಟ್ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣ, ಮಣಿಕಾಂತ್ ಖದ್ರಿ ಅವರ ಸಂಗೀತ ನೀಡಲು ಮುಂದಾಗಿದ್ದಾರೆ.